Tuesday, November 10, 2009

ಸುಮ್ಮನಾಗು ಮನಸೇ , ಸುಮ್ಮನೆ ನಗು..

ನಿನ್ನ ಮೌನಕ್ಕೆ ನಾನು ಮೌನದಲ್ಲೇ
ಉತ್ತರ ಹೇಳಬೇಕು ಅಂದುಕೊಂಡೆ,
ಸಾಧ್ಯವಾಗಲಿಲ್ಲ ಸುಮ್ಮನಿರಲು.....
ನಿಟ್ಟುಸಿರಲ್ಲೇ ಕಳೆದ ವೇಳೆ, ಕರಗುತ್ತಿತ್ತು
ವಿಷಾದ ಛಾಯೆ ನನ್ನೊಳಗೇ,
ಏಕೆ ಬಂದೆ ನೀನು ಮತ್ತೆ ಮನದೊಳಗೆ?
ತಿಳಿನೀರ ಮೇಲೆ ಕಲ್ಲೆಸೆದು ಕಲಕಿದ್ದಾದರೂ ಯಾಕೆ?
ಸುಮ್ಮನಾಗು ಮನಸೇ, ಸುಮ್ಮನೆ ನಗು...

Saturday, October 24, 2009

ದೀಪದ ಬೆಳಕಲ್ಲಿ........

ನಿನ್ನ ನೋಟದ ತುಂಬ
ಸಾಲು ದೀಪದ ಬೆಳಕು,
ಮಾತು ಮರೆತು ನಿಂತೆ
ನಾನು ನಿನ್ನ ಪ್ರೀತಿ ಬೆಳಕಲಿ....
ಮೊದಲ ಸಲ ದೀಪದೆದುರು
ಕಣ್ಣ ಕಾಂತಿ ಸಡ್ಡು ಹೊಡೆಯಿತು,
ಕತ್ತಲೆಂದೂ ಬರದು ಎಂದು
ನನಗೆ ಸಾರಿ ಹೇಳಿತು.
ಮೌನ ಮೀರಿದ ಮಾತಿಗಿಂತ
ನಿನ್ನ ಕಣ್ಣ ಮಾತೆ ಇಂಪು,
ಹೃದಯ ತುಂಬಿ ಒಪ್ಪಿದೆ .
ದೀಪಾವಳಿಯ ಬೆಳಕು
ಮೌನ-ಮಾತು ಬೆಸೆದಿದೆ...
ಕಣ್ಣು ಕಣ್ಣಲಿ ಬೆರೆತು
ಬೆಳಕು ಬಳ್ಳಿಯು ಹಬ್ಬಿದೆ.


Wednesday, September 16, 2009

ಕಿಟಿಕಿಯಾಚೆಗಿನ ದೃಶ್ಯ

ನೆಟ್ಟ ದೃಷ್ಟಿ ನೆಟ್ಟ ಹಾಗೆ ಸ್ಪಷ್ಟವಿಲ್ಲ ಚಿತ್ರಣ
ಕಿಟಿಕಿಯಾಚೆ ನಿಂತ ನಿನ್ನ ಮೌನ ,
ನನ್ನೆದೆಯಲೇಕೋ ಏನೋ ತಲ್ಲಣ
ಮೌನ ಮೀರಿ ಮಾತು ಬರಲಿ ಈ ಕ್ಷಣ. ........
ನಿನ್ನ ಪ್ರೀತಿ ಕರೆಯಿತೆನ್ನ ಕಿಟಿಕಿ ಹತ್ತಿರ
ಕದ್ದು ಮುಚ್ಹಿ ಕಂಡ ಕನಸ ನೆನೆಯುತ,
ನಿನ್ನ ನಗುವಲೆ ಲೀನವಾಗಿ ಮಾತು ಮರೆಯಿತು
ಮೌನ ನೀಡಿತು ಉತ್ತರ ............

Thursday, September 10, 2009

ಮುಸ್ಸಂಜೆಯ ಮೌನ

ಆಕಾಶದ ತುಂಬ ಬಿಳಿ ನೀಲಿ ಕಪ್ಪು ಮೋಡ
ಅದನೆ ನೋಡುತ ನಿಂತಿರುವೆ, ಮಾತಾಡಬೇಡ
ಮೌನ ಮೀರಿದರೆ ಈಗಿರುವ ಗಳಿಗೆ ಈಗಿಲ್ಲ
ಕಳೆದು ಹೋಗುವುದು ಈ ಆನಂದ ತರವಲ್ಲ
ನೀನಾಡುವ ಮಾತುಗಳ ಮನದಲ್ಲೇ ಆಡಬಹುದು
ಕೇಳುವುದು ನನ್ನೊಳಗಿವಿಗೆ ಆ ಗಳಿಗೆಯಲ್ಲೇ!

Monday, August 17, 2009

ನೆನಪುಗಳು ಮಧುರ

ಹದಿನೈದು ವರ್ಷಗಳ ಹಿಂದೊಮ್ಮೆ
ನಡೆದು ಹೋಗಿದ್ದ ದಾರಿ ಈಗಲೂ
ಮತ್ತೆ ಮತ್ತೆ ನೆನಪಾಗುತ್ತಿದೆ
ದಾರಿಯುದ್ದಕು ಮೌನದ್ದೆ ಮೆರವಣಿಗೆ
ಮರಗಳು ಬೀಸಿದ ಗಾಳಿಯಲ್ಲಿ ಕೇಳುತ್ತಿತ್ತು
ನಿನ್ನ ಪಿಸು ಮಾತು....................
ಪಕ್ಷಿಗಳ ಚಿಲಿಪಿಲಿಯಲ್ಲಿ ನಿನ್ನ ನಗೆ ಚಿಲುಮೆ
ಅರಸುತ್ತೇನೆ ಇಂದೂ ನಾನು ಈ ಬೆನ್ಗಾಡಿನಲ್ಲೂ.........,
ಮೌನ ಮರೆತು ನಕ್ಕು ಬಿಡೋಣ
ಪಿಸು ಮಾತುಗಳಲಿ ಕಳೆದು ಹೋಗೋಣ........

Sunday, August 16, 2009

ಕಳೆದು ಹೋಗುವುದು ಬೇಡ

ನಮ್ಮಿಬ್ಬರ ನಡುವೆ ಬೆಳೆದದ್ದು
ಮೌನ ಬೆಟ್ಟ...........
ನೋಡಲು ಹಿಮ ಪರ್ವತ
ಒಳಗೇ ಕುದಿವ ಜ್ವಾಲಾಮುಖಿ
ಗಿರಿ ಕಂದರದಲ್ಲಿ ಹರಿದ ಪ್ರವಾಹ
ಬೆಟ್ಟದ ತಳ ಸೇರಿದವೇ
ನನ್ನ ಮಾತುಗಳು!
ಬೆಟ್ಟದಾಚೆಗೆಲ್ಲೋ ನೀನು
ಬಚ್ಚಿಟ್ಟುಕೊಂಡು ಕರೆಯುತ್ತಿರುವೆ
ಎಲ್ಲೆಂದು ಹುಡುಕಲಿ ಹೇಳು
ಸೋತು ಹೋಗಿದ್ದೇನೆ
ಮೌನ ಹಿಮ ಕರಗಿ
ಹರಿಯಲಿ ಮಾತಿನ ಪ್ರವಾಹ
ಜ್ವಾಲಾಮುಖಿ ಸಿಡಿವ ಮುನ್ನ
ನಾವು ಕಳೆದು ಹೋಗುವ ಮುನ್ನ..........

Friday, August 14, 2009

ಸಿಂಚನ ಬರೆದ ಕವನ

ಬಂತು ಬಂತು ಯುಗಾದಿ
ಮಕ್ಕಳಿಗೆಲ್ಲ ಸಿಕ್ಕಿತು ಸಿಹಿ
ತಿಂದರು ತಿಂದರು ಸಿಹಿಯನ್ನು.
ಬಂತು ಬಂತು ದೀಪಾವಳಿ
ಎಲ್ಲರಿಗು ಪಟಾಕಿ ಹಚ್ಹುವ ಸಂಭ್ರಮ
ಬಂತು ಬಂತು ಸ್ವಾತಂತ್ರ್ಯೋತ್ಸವ
ಎಲ್ಲೆಡೆಯೂ ಹಬ್ಬದ ಸಂಭ್ರಮ

ಸಿಂಚನ ಬರೆದ ಕವನ(ನನ್ನ ಕವನ)

ಹೂವಿಗೆ ಬೇಕು ಅಂದ
ದುಂಬಿಗೆ ಮಕರಂದ
ಹಸುವಿಗೆ ಬೇಕು ಹುಲ್ಲು
ಕೋಳಿಗೆ ಕಾಳು
ತಂದೆಯು ಬಯಸಿದ ಹಣವನ್ನು
ತಾಯಿಯು ಒಳ್ಳೆಯ ಗುಣವನ್ನು
ಮಗುವು ಬಯಸಿತು ಹಾಲನ್ನು
ನಾನು ಚಾಕಲೇಟ್ ನ್ನು




ಹನಿಕವನಗಳು

ಕಳೆದು ಹೋಗಿದ್ದ
ದಿನಗಳು ಮರಳಿ ಬಂದಿವೆ!
ಶ್ರಾವಣದ ದಿನಗಳು
ನನ್ನದಾಗಿವೆ!


ಕನಸಲ್ಲವಿದು ಜೀವನದ ಸತ್ಯ
ಹುಡುಕುತಿದ್ದ ಕವಿತೆಗಳು
ಕಾಲಿಗೆ ತೊಡರುತಿವೆ
ಎತ್ತಿಕೋ ಕೈಗೆ ಎನ್ನುತಿವೆ !

Thursday, August 13, 2009

ಮೌನ ಮೀರಿದ ಗಳಿಗೆ

ವರ್ಷಗಳಿಂದ ಹೆಪ್ಪು ಗಟ್ಟಿದ್ದ ಮೌನ
ತಾನಾಗಿ ಕರಗುತಿದೆ ಈ ಗಳಿಗೆ
ಹಾಡಲ್ಲ , ಇದು ಕಥೆಯೂ ಅಲ್ಲ
ನನ್ನ ಸಂತಸದ ಮೂರ್ತ ರೂಪ!
ಕಣ್ಣೊಳಗೆ ಹೆಪ್ಪು ಗಟ್ಟಿದ್ದ ನನ್ನಂತರಂಗ
ಹನಿಯುತಿದೆ ..............
ನಾಳೆಗಳ ಭರವಸೆಯೊಡನೆ,
ಇದು ಆನಂದಭಾಷ್ಪ..