ಮಾವ ಒಳ್ಳೆಯ ಮನುಷ್ಯನಾಗಿದ್ದನಾ?
ಈ ನನ್ನ ಸಂಶಯಕ್ಕೆ ಉತ್ತರವಿಲ್ಲ ಬಿಡಿ,
ಅತ್ತೆಯೋ ಪತಿವ್ರತಾ ಶಿರೋಮಣಿ..
ಮಾವ ಹೇಳಿದ ಸುಳ್ಳು ಕಥೆಗಳಿಗೆ ತಲೆದೂಗಿ,
ಅತಿ ರಂಜನೆಗೆ ಮಾರು ಹೋದ ಮುಗ್ಧೆ ....
ಮಾವ ಮನೆ ಹೊರಟರೆ ಹೊಲ-ಗದ್ದೆ ಸುತ್ತಿ,
ಬೈಲಾಚೆ ಒಕ್ಕಲು ಮನೆಯ
ಜಗಲಿ ಹತ್ತಿ ಹರಟೆ ಹೊಡೆದು,
ಅಲ್ಲೊಂದಿಷ್ಟು ಕಥೆ ಹೇಳಿ ಮನೆಗೆ ಬಂದಾಗ-
ದೇವರ ಮುಂದಿನ ನಂದಾ ದೀಪದ
ಬತ್ತಿ ಸರಿ ಮಾಡುತ್ತಿದ್ದರು ಅತ್ತೆ,
ಮಿಂದು ಮಡಿಯುಟ್ಟು, ದೊಡ್ಡ ಕುಂಕುಮದ ಬೊಟ್ಟಿಟ್ಟು ,
ಬೇಲಿಯ ಹೂ ಮೊಗ್ಗುಗಳ ಮಾಲೆ ತುರುಬಿಗಿತ್ತು
ಪಟ್ಟೆ ನೂಲಿನ ತುದಿಯ ತಾಳಿ ಸೆರಗಲಡಗಿತ್ತು..
ಅತ್ತೆಯೆಂದರೆ ನಮಗೆಲ್ಲ
ಹಳ್ಳಿ ಮನೆಯ ಗೊಡ್ಡು ಸಂಪ್ರದಾಯಸ್ಥೆ ,
ಮಾವನಿಗೆ ಕಚ್ಚಿದ್ದು ಹಾವು ,
ಮೈಯೆಲ್ಲ ವಿಷ ಹರಡಿ - ನೆತ್ತಿವರೆಗೇರಿದಾಗ,
ಅತ್ತೆಯ ಬಗ್ಗೆ ಚಿಂತಿಸಿ,
ತಲೆ ಕೆಡಿಸಿ ಕೊಂಡವರು ನಾವು,
ಕಾಲವೆಂಬುದು ಸತ್ಯವನೆದುರಿಸುವ ಪಾಠ
ಕಲಿಸುತ್ತದೆಂಬ ಸತ್ಯ ತಿಳಿದದ್ದು ,
ಅತ್ತೆಯ ಕಂಡಾಗ,
ಪಟ್ಟೆ ನೂಲಿಲ್ಲ ಕತ್ತಲ್ಲಿ ,
ಕುಂಕುಮವಿಲ್ಲ ಹಣೆಯಲ್ಲಿ,
ಬದಲಿಗೆ,
ಕರಿಮಣಿಯ ಸರವಿತ್ತು, ಹಣೆಯಲ್ಲಿ ಸ್ಟಿಕ್ಕರ್ ಬೊಟ್ಟು..