Wednesday, April 14, 2021

ಗಾವೋ ವಿಶ್ವಸ್ಯ ಮಾತರಃ

 ಸಪ್ತಗಿರಿವಾಸನ ಜಗಕೆ ತೋರಿದಾಕೆ

ಜಗವ ರಕ್ಷಿಪನ ಹಾಲಿತ್ತು ಪೊರೆದಾಕೆ

ಜೀವಜಗದಮಾತೆಯೀಕೆ-ಅನ್ಯಮಾತೇಕೆ?

ಗಾವೋ_ವಿಶ್ವಸ್ಯ_ಮಾತರಃ


ದೊರೆ ದಿಲೀಪಗೆ ಸಂತತಿಯ ವರವಿತ್ತು ಹರಸಿದಾಕೆ

ಧೇನು ರೂಪಕೆ ನಂದಿನಿಯೆಂಬ ನಾಮ ಸಾಕೇ!?

ಜೀವಜಗದ ಮಾತೆಯೀಕೆ- ಅನ್ಯಮಾತೇಕೆ?

ಗಾವೋ_ವಿಶ್ವಸ್ಯ_ಮಾತರಃ


ಕೌಶಿಕಗೆ ಗುರುಪಾದ ತೋರಿದವಳೀಕೆ

ದೊರೆಯ ಭವಸಾಗರವ ದಾಟಿಸಿದಾಕೆ

ಜೀವಜಗದ ಮಾತೆಯೀಕೆ- ಅನ್ಯಮಾತೇಕೆ!? ಗಾವೋ_ವಿಶ್ವಸ್ಯ_ಮಾತರಃ

 

ಪಾಯಸದಿ ಕೌಸಲ್ಯೆಗೆ ರತ್ನವ ಪುತ್ರನಾಗಿತ್ತವಳು

ಫಾಲಲೋಚನನ ಸಂಚಾರಕೆ ಸಂತಾನವನೆ ಇತ್ತವಳು..

ಜೀವಜಗದ ಮಾತೆಯೀಕೆ- ಅನ್ಯಮಾತೇಕೆ!? ಗಾವೋ_ವಿಶ್ವಸ್ಯ_ಮಾತರಃ


ಪಾಲ್ಗಡಲಲಿ ಬ್ರಹ್ಮತೇಜದಿ ಜನಿಸಿದಾಕೆ

ಪಾಲ್ಗಡಲೊಡೆಯನೆ ಪಾಲಕನಾಗಿಹ ಸುರಧೇನು ಸುರಭಿಯೀಕೆ

ಜೀವಜಗದ ಮಾತೆಯೀಕೆ- ಅನ್ಯಮಾತೇಕೆ!? ಗಾವೋ_ವಿಶ್ವಸ್ಯ_ಮಾತರಃ

 

ಸತ್ಯದಿಂದಲೇ ಅರ್ಬುತವ್ಯಾಘ್ರನ ಮಣಿಸಿದಾಕೆ

ನಮ್ಮನೆಲದವಳೀಕೆ ಪುಣ್ಯಕೋಟಿ ಹೆಸರಿನಾಕೆ

ಜೀವಜಗದಮಾತೆಯೀಕೆ -  ಅನ್ಯಮಾತೇಕೆ!?

ಗಾವೋ_ವಿಶ್ವಸ್ಯ_ಮಾತರಃ

 

ಸಾವಿರಕರಗಳ ಶೂರನ ಹಸಿವನು ನೀಗಿದಳೀಕೆ!

ಮದಿಸಿದ ಕ್ಷತ್ರಿಯ ಕುಲಕೆ ಕೊಡಲಿಯೆ ಆದವಳಾಕೆ!

ಜೀವಜಗದ ಮಾತೆಯೀಕೆ-

ಅನ್ಯ ಮಾತೇಕೆ!? ಗಾವೋ_ವಿಶ್ವಸ್ಯ_ಮಾತರಃ


ಬೃಂದಾವನದಲಿ ನಂದನ ಕಂದನ ಪೊರೆದವಳು!

ಗಿರಿಧಾರಿಯು ಸಖಿಯೊಡನಿರೆ ಜೊತೆಗೂಡಿದಳು!

ಜೀವಜಗದಮಾತೆಯೀಕೆ-ಅನ್ಯಮಾತೇಕೆ?

ಗಾವೋ_ವಿಶ್ವಸ್ಯ_ಮಾತರಃ



ಕರುಳಕುಡಿಯ ಕೊಲೆಯಾಗಿರಲು ನ್ಯಾಯಗಂಟೆಯನೆಳೆದಳೀಕೆ

ನ್ಯಾಯದೇವತೆಗೆದುರು ನಿಂದು ವಾತ್ಸಲ್ಯಧಾರೆ ಹರಿಸಿದಾಕೆ

ಜೀವಜಗದ ಮಾತೆಯೀಕೆ-ಅನ್ಯಮಾತೇಕೆ? ಗಾವೋ_ವಿಶ್ವಸ್ಯ_ಮಾತರಃ


ನಹುಷಗೆ  ಋಷಿ ಮುನಿಗಳ ಗರಿಮೆಯ ಅರುಹಿದಳೀಕೆ

ಸಂತರ ಸರಿಸಾಟಿಯು ಜಗದೊಳು ಇವಳೊಬ್ಬಾಕೆ

ಜೀವಜಗದ ಮಾತೆಯೀಕೆ- ಅನ್ಯಮಾತೇಕೆ? ಗಾವೋ_ವಿಶ್ವಸ್ಯ_ಮಾತರಃ


ಪರತಂತ್ರದ ಸಂಕಲೆ ಕಿತ್ತೆಸೆದ

ತ್ಯಾಗಮಯಿಯಾಕೆ.

ಧಮನಿಗಳಲೆಚ್ಚರ ಚಿಮ್ಮಿಸಿ ದೇಶಕೆ ಮಂಗಲವಿತ್ತವಳೀಕೆ..

ಜೀವಜಗದ ಮಾತೆಯೀಕೆ-ಅನ್ಯಮಾತೇಕೆ!? 

ಗಾವೋ_ವಿಶ್ವಸ್ಯ_ಮಾತರಃ


ಸೃಷ್ಟಿ ಸ್ಥಿತಿ ಲಯ ಸ್ವರೂಪಿಯ ಹಿಂದೆ 

ನೆಲೆಸಿದಳೀಕೆ

ಮಂತ್ರಾಲಯ ಕ್ಷೇತ್ರಕೆ ಕಾಮಧೇನುವೆಂಬ 

ಹೆಸರಿತ್ತಾಕೆ.

ಜೀವಜಗದ ಮಾತೆಯೀಕೆ-ಅನ್ಯ ಮಾತೇಕೆ? 

ಗಾವೋ_ವಿಶ್ವಸ್ಯ_ಮಾತರಃ


ಜನಕಸಭೆಯಲಿ ಯಾಜ್ಞವಲ್ಕ್ಯರ ವಿದ್ವತ್ತಿಗೆ ಒಲಿದವಳೀಕೆ.

ಮುಗುದೆ ಕಾತ್ಯಾಯಿನಿಯ ಸಾವಿರ ಕನಸುಗಳ ನನಸಾಗಿಸಿದಾಕೆ.

ಜೀವಜಗದ ಮಾತೆಯೀಕೆ-‌ಅನ್ಯ ಮಾತೇಕೆ? ಗಾವೋ_ವಿಶ್ವಸ್ಯ_ಮಾತರಃ


ಸಕಲ ಚರಾಚರಗಳ ಪೊರೆಯುವ

ವಿಶ್ವ ಜನನಿಯೀಕೆ

ಸತ್ಯವಂತ ಜಾಬಾಲಿಗೆ ಬ್ರಹ್ಮ ಜ್ಞಾನವ

ಕರುಣಿಸಿದಾಕೆ...

ಜೀವಜಗದ ಮಾತೆಯೀಕೆ - ಅನ್ಯಮಾತೇಕೆ? ಗಾವೋ_ವಿಶ್ವಸ್ಯ_ಮಾತರಃ


ಶ್ರೀ ಗುರು ರಾಘವೇಶ್ವರ ಪಾಲಿತಳೀಕೆ

ಕರುಣಾಪೂರ್ಣರ ಉಸಿರಾಗಿಹಳೀಕೆ

ಜೀವಜಗದ ಮಾತೆಯೀಕೆ - ಅನ್ಯಮಾತೇಕೆ? ಗಾವೋ_ವಿಶ್ವಸ್ಯ_ಮಾತರಃ


Saturday, July 6, 2019

ನೋವು

ಬಚ್ಚಿಟ್ಟ ನೋವುಗಳು ಎದೆಯೊಳಗೆ ಬೇಯುತ್ತವೆ,
ಬಿಚ್ಚಿಡುವೆನೆಂದರದು ಮುಟ್ಟಲಾರದಷ್ಟು ಸುಡುತ್ತದೆ!
ಕೆಂಡದೊಲೆಮೇಲೆ ಕಣ್ಣೀರು
ಬತ್ತಿ ಆವಿಯಾಗುವುದು,
ಮೋಡಕಟ್ಟಿದ ಬಾನಿಂದ ರಾತ್ರಿಯಲಿ ಸದ್ದಿಲ್ಲದೇ ಸುರಿವ  ಮಳೆಯಂತೆ,
ಬಿಕ್ಕಳಿಕೆ ತುಟಿ ದಾಟದಂತೆ
ಕಾಯುವುದು,
ಬಾಗಿಲಿನೊಳಗೇ ನೋವನಡಗಿಸಿ
ಹುಸಿ ನಗುವೊಂದು ಹೊಸಿಲಲ್ಲಿ
ತಾ ಬಂದು ನಿಲ್ಲುವುದು
ಜಗದ ಕಣ್ಣಿಗೆ ಕಾಣದಂತೆ
ಮುಚ್ಚಿದ ಬೂದಿಯಲಿ
ಕೆಂಡ ಅಡಗಿದಂತೆ!


Saturday, June 15, 2019

ಪಯಣ



ನನ್ನ ಹೆಜ್ಜೆಗಳನು ನಾನಿಟ್ಟೇ ಕ್ರಮಿಸಬೇಕು...
ಗಮ್ಯವದು ಸಾವಿರ ಮೈಲುಗಳದ್ದಾದರೂ ಸರಿ,
ಹತ್ತೇ ಹೆಜ್ಜೆಗಳಲಿ ಮುಗಿದರೂ ಸರಿ...
ಹೆಜ್ಜೆಯದು ಭಾರವೆಂದು ಇದ್ದಲ್ಲೇ ಇರುವಂತಿಲ್ಲ,
ಕಲ್ಲು ಮುಳ್ಳುಗಳಿಗೆ ಅಂಜುವಂತಿಲ್ಲ...
ಎಡವಿದರೂ ಸರಿಯೆ,
ಗಾಯ ಮಾಗುವ ಮೊದಲೇ
ಮತ್ತೆ ಪಯಣಿಸಬೇಕು...
ಚುಚ್ಚಿದ ಮುಳ್ಳನ್ನು ಕಿತ್ತು
ಹಿಂತಿರುಗಿ ನೋಡದೇ  ನಡೆಯಬೇಕು...
ಕ್ರಮಿಸಿದ ದಾರಿಗಿಂತ ಮುಂದಿರುವ ದಾರಿಯೇ ಮುಖ್ಯ,
ದೃಢ ಲಕ್ಷ್ಯವೊಂದಿದ್ದರೆ ಸಾಕು,
ದಾಹ ದಣಿವುಗಳ ಅರಿವಾಗುವುದಿಲ್ಲ...
ಹಸಿವು ಕಸುವನು ಕಸಿಯುವುದಿಲ್ಲ...
ಸಾವಿರ ಮೈಲುಗಳ ದೂರ ಹತ್ತೇ ಹೆಜ್ಜೆಯಲಿ ಮುಗಿದಂತೆ ಭಾಸವಾದರೆ ಅದು ಅಚ್ಚರಿಯಲ್ಲ!!!

Wednesday, June 12, 2019

ನೆನಪು - ಚಿತ್ತಾರ

ಯಾರದೋ ಉಸಿರು
ನನ್ನ ಬಸಿರೊಳಗೆ ಕಾಡುತಿಹುದೇಕೆ?
ಇರುಳ ತಮವದು ಹಗಲಲೂ ನುಸುಳಿ ನುಗ್ಗುತಿಹುದೇಕೆ?
ಅರ್ಥವಾಗದ ಮೌನ
ಕಿರುನಗೆಯ ಅಣಕ,
ಸುಡುವುದೀ ಬದುಕ...
ನೆತ್ತಿಗೇರಿದ ಭಾನು;
ಹೊನ್ನಶೂಲದ ಮಾತುಗಳಲ್ಲಿಲ್ಲ ದುಡುಕು!
ಕತ್ತಲೆಯ ಮಬ್ಬು
ಕವಿಯುತಿಹುದಿಲ್ಲಿ,  ಬಾನ ಬಾಂದಳದಲ್ಲಿ....
ಉರಿವ ಸೂರ್ಯಗೆ ಗ್ರಹಣ ಹಿಡಿದಿಹುದು ಮಧ್ಯಾಹ್ನದಲಿ...
ಇಳಿದ ಈ ಸಂಜೆಯಲಿ
ತಾರೆ ಮೂಡದ ಆಗಸವಿದೆ...
ಕತ್ತಲಾವರಿಸಿದೆ
ಬಣ್ಣವಿರದ ಕುಂಚದಲಿ
ಮೋಡ ಚಿತ್ತಾರ ಬಿಡಿಸಿದೆ!

Tuesday, May 28, 2019

ಸುಡುವ ಮೌನವ ಮೀರಿ

ಮೌನದ ಶಕ್ತಿಯ ಬಗ್ಗೆ ಸಂಶಯವೇಕೆ?
ಮಾತಿಗಿಂತಲು ಪ್ರಬಲಾಸ್ತ್ರ ಮೌನದ್ದು,
ಮಣಿಸಬಲ್ಲುದು ಜಗವನ್ನೆ  ಕಲ್ಲುಬಂಡೆಯ ಮೌನ...
ಮುನಿಸಿಗೂ ಮೌನಕ್ಕೂ ನಂಟು ಬಹಳ...
ಅರ್ಥವಾಗದ ಮೌನ ಸುಡುವುದೊಮ್ಮೊಮ್ಮೆ ಜೀವಗಳನು...
ನೊಂದು ನುಡಿಯಲು ಬಹುದೆರಡು ಮಾತು,
ಮೌನವದು ಬರಿಯ ಶಾಪ!
ಅರ್ಥವಾದರೂ ಸರಿಯೆ, ಅರ್ಥವಾಗದಿದ್ದರೂ ಸರಿಯೆ,
ಮೌನವೆಂಬ ಬಂಗಾರಕ್ಕಿಂತ
ಮಾತೆಂಬ ಬೆಳ್ಳಿಯೇ ಸೆಳೆಯುವುದು...
ಮೌನದಿಂದಿರಲು ಕಲಹವಿಲ್ಲವೆಂಬುದೂ ಕೆಲವೊಮ್ಮೆ ಕುಹಕವೆನಿಸುವುದು...
ಸುಡುವ ಮೌನದ ದಳ್ಳುರಿಯಲಿ ಬೆಂದ ಜೀವ‌ಕ್ಕೆ
ಮೌನಮೀರುತ್ತ
ತಂಪೆರೆಯಲು ಬರಲಿ ಒಂದೆರಡು ಮಾತುಗಳು ಮಳೆಯ ಹನಿಯಂತೆ...

Monday, September 3, 2018

ಮಾಧವನರಸಿಗೆ....



ಮಿಡಿವ
ಕೊಳಲಿನಂತರಾಳದಲ್ಲಿ
ರಾಧೆ ನಿನ್ನ ಹೆಸರು...
ಉಲಿವ
ನಲಿವ ಸಪ್ತಸ್ವರಗಳಲ್ಲಿ
ರಾಧೆ ನನ್ನ ಉಸಿರು...

ಯಮುನೆಯಾಳದಲ್ಲಿ
ಕಾಂಬ ಬಿಂಬದಲ್ಲಿ
ರಾಧೆ ನಿನ್ನ ಹೆಸರು....
ನದಿಯ ನಾದದಲ್ಲಿ
ಬೆರೆತು ಹೋಗುವಂತೆ
ರಾಧೆ ನನ್ನ ಉಸಿರು...

ಕುಣಿವ
ಹರಿಣ ಮೇಳದಲ್ಲಿ
ರಾಧೆ ನಿನ್ನ ಹೆಸರು...
ಸುಳಿವ
ಗಾಳಿ ಗಂಧದಲ್ಲಿ
ರಾಧೆ ನನ್ನ ಉಸಿರು...

- ಸಂಧ್ಯಾ ಕಾನತ್ತೂರು

Tuesday, July 31, 2018

ಬತ್ತದಲೆಗಳ ನಡುವೆ...

ನಿನ್ನ ಮೌನ ಅನು ಕ್ಷಣ ಕೊಲ್ಲುವುದೆನ್ನ,
ಭಾವನೆಗಳೂ, ತಲ್ಲಣಗಳೂ ಹೊಸದಲ್ಲವೆನಗೆ....
ಆಡಿದ ಮಾತುಗಳು ನಿನಗೆ ಮರೆತಿರಬಹುದು,
ಮರೆಯುವುದೆಂತು ನಾನು?
ಒಂದೊಮ್ಮೆ ನೀಡಿದ ವಚನಕ್ಕೆ ನಾನು ಬದ್ಧಳಾಗಿರುವೆ,
ಅರೆ ಕ್ಷಣಕ್ಕೂ ಬದಲಾಗದೆನ್ನ ಭಾವನೆ...
ಸದ್ದಾಗದಂತೆ ಸರಿದು ಹೋಗುವ ಯತ್ನವು ಬೇಡ,
ಮುರಿದು ಹೋಗುವ ಬಂಧವನು ದೇವ ಬೆಸೆಯುವವನಲ್ಲ...
ಮನದ ಮೂಲೆಯಲಿ ಎಂದಿಗೂ ಬತ್ತದು ಜೀವ ಸೆಲೆ,
ಕೊರಡಾಗುವೆನೆಂದರೂ, ಕುರುಡಾಗುವೆನೆಂದರೂ
ಬಿಡದೇ ಭೋರ್ಗರೆವ ಭಾವದಲೆ...