Monday, August 17, 2009

ನೆನಪುಗಳು ಮಧುರ

ಹದಿನೈದು ವರ್ಷಗಳ ಹಿಂದೊಮ್ಮೆ
ನಡೆದು ಹೋಗಿದ್ದ ದಾರಿ ಈಗಲೂ
ಮತ್ತೆ ಮತ್ತೆ ನೆನಪಾಗುತ್ತಿದೆ
ದಾರಿಯುದ್ದಕು ಮೌನದ್ದೆ ಮೆರವಣಿಗೆ
ಮರಗಳು ಬೀಸಿದ ಗಾಳಿಯಲ್ಲಿ ಕೇಳುತ್ತಿತ್ತು
ನಿನ್ನ ಪಿಸು ಮಾತು....................
ಪಕ್ಷಿಗಳ ಚಿಲಿಪಿಲಿಯಲ್ಲಿ ನಿನ್ನ ನಗೆ ಚಿಲುಮೆ
ಅರಸುತ್ತೇನೆ ಇಂದೂ ನಾನು ಈ ಬೆನ್ಗಾಡಿನಲ್ಲೂ.........,
ಮೌನ ಮರೆತು ನಕ್ಕು ಬಿಡೋಣ
ಪಿಸು ಮಾತುಗಳಲಿ ಕಳೆದು ಹೋಗೋಣ........

Sunday, August 16, 2009

ಕಳೆದು ಹೋಗುವುದು ಬೇಡ

ನಮ್ಮಿಬ್ಬರ ನಡುವೆ ಬೆಳೆದದ್ದು
ಮೌನ ಬೆಟ್ಟ...........
ನೋಡಲು ಹಿಮ ಪರ್ವತ
ಒಳಗೇ ಕುದಿವ ಜ್ವಾಲಾಮುಖಿ
ಗಿರಿ ಕಂದರದಲ್ಲಿ ಹರಿದ ಪ್ರವಾಹ
ಬೆಟ್ಟದ ತಳ ಸೇರಿದವೇ
ನನ್ನ ಮಾತುಗಳು!
ಬೆಟ್ಟದಾಚೆಗೆಲ್ಲೋ ನೀನು
ಬಚ್ಚಿಟ್ಟುಕೊಂಡು ಕರೆಯುತ್ತಿರುವೆ
ಎಲ್ಲೆಂದು ಹುಡುಕಲಿ ಹೇಳು
ಸೋತು ಹೋಗಿದ್ದೇನೆ
ಮೌನ ಹಿಮ ಕರಗಿ
ಹರಿಯಲಿ ಮಾತಿನ ಪ್ರವಾಹ
ಜ್ವಾಲಾಮುಖಿ ಸಿಡಿವ ಮುನ್ನ
ನಾವು ಕಳೆದು ಹೋಗುವ ಮುನ್ನ..........

Friday, August 14, 2009

ಸಿಂಚನ ಬರೆದ ಕವನ

ಬಂತು ಬಂತು ಯುಗಾದಿ
ಮಕ್ಕಳಿಗೆಲ್ಲ ಸಿಕ್ಕಿತು ಸಿಹಿ
ತಿಂದರು ತಿಂದರು ಸಿಹಿಯನ್ನು.
ಬಂತು ಬಂತು ದೀಪಾವಳಿ
ಎಲ್ಲರಿಗು ಪಟಾಕಿ ಹಚ್ಹುವ ಸಂಭ್ರಮ
ಬಂತು ಬಂತು ಸ್ವಾತಂತ್ರ್ಯೋತ್ಸವ
ಎಲ್ಲೆಡೆಯೂ ಹಬ್ಬದ ಸಂಭ್ರಮ

ಸಿಂಚನ ಬರೆದ ಕವನ(ನನ್ನ ಕವನ)

ಹೂವಿಗೆ ಬೇಕು ಅಂದ
ದುಂಬಿಗೆ ಮಕರಂದ
ಹಸುವಿಗೆ ಬೇಕು ಹುಲ್ಲು
ಕೋಳಿಗೆ ಕಾಳು
ತಂದೆಯು ಬಯಸಿದ ಹಣವನ್ನು
ತಾಯಿಯು ಒಳ್ಳೆಯ ಗುಣವನ್ನು
ಮಗುವು ಬಯಸಿತು ಹಾಲನ್ನು
ನಾನು ಚಾಕಲೇಟ್ ನ್ನು




ಹನಿಕವನಗಳು

ಕಳೆದು ಹೋಗಿದ್ದ
ದಿನಗಳು ಮರಳಿ ಬಂದಿವೆ!
ಶ್ರಾವಣದ ದಿನಗಳು
ನನ್ನದಾಗಿವೆ!


ಕನಸಲ್ಲವಿದು ಜೀವನದ ಸತ್ಯ
ಹುಡುಕುತಿದ್ದ ಕವಿತೆಗಳು
ಕಾಲಿಗೆ ತೊಡರುತಿವೆ
ಎತ್ತಿಕೋ ಕೈಗೆ ಎನ್ನುತಿವೆ !

Thursday, August 13, 2009

ಮೌನ ಮೀರಿದ ಗಳಿಗೆ

ವರ್ಷಗಳಿಂದ ಹೆಪ್ಪು ಗಟ್ಟಿದ್ದ ಮೌನ
ತಾನಾಗಿ ಕರಗುತಿದೆ ಈ ಗಳಿಗೆ
ಹಾಡಲ್ಲ , ಇದು ಕಥೆಯೂ ಅಲ್ಲ
ನನ್ನ ಸಂತಸದ ಮೂರ್ತ ರೂಪ!
ಕಣ್ಣೊಳಗೆ ಹೆಪ್ಪು ಗಟ್ಟಿದ್ದ ನನ್ನಂತರಂಗ
ಹನಿಯುತಿದೆ ..............
ನಾಳೆಗಳ ಭರವಸೆಯೊಡನೆ,
ಇದು ಆನಂದಭಾಷ್ಪ..